ಅದ್ಯಾಕೋ ನಟ ದರ್ಶನ್ ಟೈಮೇ ಸರಿ ಇಲ್ಲ ಎನಿಸುತ್ತದೆ. ಈಗಾಗಲೇ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ದರ್ಶನ್ ಜೈಲಿನಲ್ಲಿ ಇದ್ದಾಗಲೂ ದೂರುಗಳು ದಾಖಲಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ವಿಚಾರಕ್ಕೆ ಸಂಬಂಧಿಸಿ 3 ಎಫ್ಐಆರ್ ದಾಖಲಾಗಿತ್ತು.
ಕಳೆದ ತಿಂಗಳು ಬೆದರಿಕೆ ಆರೋಪ ಸಂಬಂಧ ಸಿನಿಮಾ ನಿರ್ಮಾಪಕ ಭರತ್ ಎಂಬುವವರು ದರ್ಶನ್ ವಿರುದ್ಧ ದೂರು ನೀಡಿದ್ದು ಗೊತ್ತೇಯಿದೆ. ದರ್ಶನ್ ಅಭಿಮಾನಿಗಳಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅವರು ಆರೋಪಿಸಿದ್ದರು. ಇದೀಗ ಬೆದರಿಕೆ ಆರೋಪದಲ್ಲೇ ಲಾಯರ್ ಜಗದೀಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇತ್ತೀಚೆಗೆ ದರ್ಶನ್ ವಿರುದ್ಧ ಜಗದೀಶ್ ವೀಡಿಯೋ ಮಾಡಿ ಮಾತನಾಡುತ್ತಿದ್ದಾರೆ. ಹಾಗಾಗಿ ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಇದೀಗ ದೂರು ನೀಡಿದ್ದಾರೆ.